ಉ.ಕ ಸುದ್ದಿಜಾಲ ಬೆಳಗಾವಿ :
ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದಾರೆ. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಶಾಸಕ ರಾಜು ಕಾಗೆ ಆಯ್ಕೆಯಾಗಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಈ ಭಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಲಿಂಗಾಯತ ಸಮುದಾಯದವರನ್ನು ಆಯ್ಕೆ ಮಾಡುತ್ತೇವೆ ಎಂದು ಮೊದಲೇ ಭರವಸೆ ನೀಡಿದ್ದರು.
ಅದರಂತೆ ಈಗ ಲಿಂಗಾಯತ ಸಮುದಾಯ ಅಣ್ಣಾ ಸಾಹೇಬ್ ಜೊಲ್ಲೆರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ನಾಯಕರೇ ಆಯ್ಕೆಯಾಗಿದ್ದರು.
ಈಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಕೂಡ ಲಿಂಗಾಯತ ಸಮುದಾಯಕ್ಕೆ ನೀಡಿ, ಆ ಸಮುದಾಯದ ವಿಶ್ವಾಸ, ಬೆಂಬಲ ಗಳಿಸುವ ಪ್ರಯತ್ನವನ್ನು ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ನಡೆಸಿದ್ದಾರೆ.
ಈ ಭಾರಿ ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತದ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಬ್ರದರ್ಸ್ ಹಾಗೂ ಶಾಸಕ ಲಕ್ಷ್ಮಣ್ ಸವದಿ – ಮಾಜಿ ಸಂಸದ ರಮೇಶ್ ಕತ್ತಿ ಬಣಗಳಾಗಿ ಫೈಟ್ ನಡೆಸಿದ್ದರು. ಅಂತಿಮವಾಗಿ ಜಾರಕಿಹೊಳಿ ಬ್ರದರ್ಸ್ ಗುಂಪಿನ ಹೆಚ್ಚಿನ ಸಂಖ್ಯೆಯ ನಿರ್ದೇಶಕರು ಆಯ್ಕೆಯಾಗಿದ್ದರು.
ಈಗ ಅಧ್ಯಕ್ಷ ಸ್ಥಾನವೂ ಕೂಡ ಜಾರಕಿಹೊಳಿ ಬ್ರದರ್ಸ್ ಬಣದ ಅಣ್ಣಾಸಾಹೇಬ್ ಜೊಲ್ಲೆ ಪಾಲಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಪಕ್ಷ ರಾಜಕೀಯ ಮುಖ್ಯವಾಗಿಲ್ಲ. ಒಂದೇ ಪಕ್ಷದವರೇ ಎದುರಾಳಿಗಳೂ ಆಗಿದ್ದಾರೆ. ಲಿಂಗಾಯತ ಸಮುದಾಯದ ಅಣ್ಣಾ ಸಾಹೇಬ್ ಜೊಲ್ಲೆರನ್ನು ನಿಪ್ಪಾಣಿ ಕ್ಷೇತ್ರದಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿ ಬರಲು ಜಾರಕಿಹೊಳಿ ಬ್ರದರ್ಸ್ ಬೆಂಬಲ ನೀಡಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಇದೇ ಅಣ್ಣಾ ಸಾಹೇಬ್ ಜೊಲ್ಲೆ ವಿರುದ್ಧ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕಾ ಜಾರಕಿಹೊಳಿರನ್ನು ನಿಲ್ಲಿಸಿ ಗೆಲ್ಲುವಂತೆ ಮಾಡಿದ್ದರು.
ಈಗ ಅದೇ ರಾಜಕೀಯ ವೈರಿಯನ್ನು ತಮ್ಮ ಬಣಕ್ಕೆ ಸೆಳೆದು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವಂತೆ ನೋಡಿಕೊಳ್ಳುವುದರ ಜೊತೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಕೂಡ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿದ್ದಾರೆ.
ಈ ಮೂಲಕ ಜಿಲ್ಲೆಯ ಮತ್ತೊಬ್ಬ ರಾಜಕೀಯ ವೈರಿ ರಮೇಶ್ ಕತ್ತಿ, ಲಕ್ಷ್ಮಣ್ ಸವದಿ ಕೈ ಮೇಲಾಗದಂತೆ ನೋಡಿಕೊಳ್ಳುವಲ್ಲಿ ಜಾರಕಿಹೋಳಿ ಕುಟುಂಬದವರು ಯಶಸ್ವಿಯಾಗಿದ್ದಾರೆ.

