ಉ.ಕ ಸುದ್ದಿಜಾಲ ಅಥಣಿ :
ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಅರಣ್ಯ ಸೇವೆ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ಕನ್ನಡಿಗನಿಗೆ ಪ್ರಥಮ ರ್ಯಾಂಕ್ ಲಭಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ್ ದರೇಪ್ಪ ಕೆಂಪವಾಡ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಸಾಮಾನ್ಯ ರೈತನ ಮಗನ ಅದ್ವಿತೀಯ ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ಸತತ ಪರಿಶ್ರಮದಿಂದ ಬಸವರಾಜ್ ಅವರು ಕೇವಲ ತಮ್ಮ ಎರಡನೇ ಪ್ರಯತ್ನದಲ್ಲಿಯೇ ಟಾಪರ್ ಆಗಿದ್ದಾರೆ. ಇವರ ಅಪ್ರತಿಮ ಸಾಧನೆಯಿಂದ ಕುಟುಂಬಸ್ಥರಲ್ಲಿ ಹಾಗೂ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಸಾಮಾನ್ಯ ರೈತನ ಪುತ್ರನಾಗಿರುವ ಬಸವರಾಜ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಸವದಿ ಗ್ರಾಮದಲ್ಲೇ ಪೂರೈಸಿದ್ದರು. ಬಳಿಕ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿ ನಂತರ ಶಿರಸಿಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪಡೆದರು. ಪದವಿ ನಂತರ ಬೆಂಗಳೂರಿನಲ್ಲಿ ಯುಪಿಎಸ್ಸಿ ಪರೀಕ್ಷೆಗಾಗಿ ಕಠಿಣ ಸಿದ್ಧತೆ ನಡೆಸಿದ್ದರು.
