ಉ.ಕ ಸುದ್ದಿಜಾಲ ಬೆಳಗಾವಿ :

ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿದ್ದ 13 ವರ್ಷದ ಹುಲಿ (ಶೌರ್ಯ) ವಿಧಿವಶ. ಹುಲಿಯ ರಕ್ತಕ್ಕೆ ಸಂಬಂಧಿಸಿದ ಮೈಕ್ಲೋಪ್ಲಾಸ್ಮಾ, ಬೆಬಿಸಿಯೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ಹುಲಿ.

ಕಳೆದ 21 ದಿನಗಳಿಂದ ವೈದ್ಯರ ಉಪಚಾರದ ಮಧ್ಯೆಯೂ ಚಿಕಿತ್ಸೆ ಫಲಿಸದೇ ಶೌರ್ಯ ಸಾವು ಮರಣೋತ್ತರ ಪರೀಕ್ಷೆ ಬಳಿಕ ಮೃಗಾಲಯದಲ್ಲೇ ಹುಲಿಯ ಅಂತ್ಯಕ್ರಿಯೆ ಡಿಎಫ್‌ಓ ಮರಿಯ ಕ್ರಿಷ್ಟು ರಾಜಾ, ಆರ್‌ಎಫ್ಓ ನಾಗರಾಜ್ ಬಾಳೆಹೊಸೂರ

ಮೃಗಾಲಯದ ವೈದ್ಯ ಡಾ. ನಾಗೇಶ ಹುಯಿಲಗೋಳ, ಡಾ. ಪ್ರಶಾಂತ ಕಾಂಬಳೆ ಸಮ್ಮುಖದಲ್ಲಿ ಅಂತ್ಯಕ್ರಿಯೆ 2020 ರಲ್ಲಿ ಬನ್ನೇರುಘಟ್ಟದಿಂದ ಬೆಳಗಾವಿಗೆ ಮೂರು ಹುಲಿಗಳ ಆಗಮನ ಆ ಪೈಕಿ ಗಂಡು ಹುಲಿ ಶೌರ್ಯ ಅನಾರೋಗ್ಯದಿಂದ ಸಾವು

ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹುಲಿಯೊಂದು ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯದಲ್ಲಿದ್ದ 13 ವರ್ಷದ ‘ಶೌರ್ಯ’ ಎಂಬ ಹೆಸರಿನ ಗಂಡು ಹುಲಿ ಮೃತಪಟ್ಟಿದೆ.

Mycoplasma, Cytauxzonosis ಮತ್ತು Babesiosis ಎಂಬ ವಿರಳ ರೋಗದಿಂದ ಶೌರ್ಯ ಬಳಲುತ್ತಿದ್ದ. ಕಳೆದ 21 ದಿನಗಳಿಂದ ವನ್ಯಜೀವಿ ವೈದ್ಯ ತಜ್ಞರ ಸಲಹೆಯಂತೆ ಮೃಗಾಲಯದಲ್ಲೇ ಶೌರ್ಯನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ 9.40ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯಾ ಕ್ರಿಷ್ಟು ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ, ಕೇಂದ್ರ ಸರ್ಕಾರದ ನಿಯಮಾನುಸಾರ ಗೌರವಪೂರ್ವಕವಾಗಿ ಮೃಗಾಲಯದ ಆವರಣದಲ್ಲೇ ಶೌರ್ಯನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಆಗಿರುವ ಮಾರಿಯಾ ಕ್ರಿಷ್ಟು ರಾಜಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸುರ, ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ಮೃಗಾಲಯದ ವೈದ್ಯ ಡಾ.ನಾಗೇಶ ಹುಯಿಲಗೋಳ, ಪಶುವೈದ್ಯಕೀಯ ಇಲಾಖೆಯ ವೈದ್ಯ ಡಾ. ಪ್ರಶಾಂತ ಕಾಂಬಳೆ ಮತ್ತು ಮೃಗಾಲಯದ ಸಿಬ್ಬಂದಿ ಇದ್ದರು.

2021ರಲ್ಲಿ ಬನ್ನೇರಘಟ್ಟ ಮೃಗಾಲಯದಿಂದ ಬೆಳಗಾವಿ ಕಿರು ಮೃಗಾಲಯಕ್ಕೆ ಶೌರ್ಯನನ್ನು ಸ್ಥಳಾಂತರ ಮಾಡಲಾಗಿತ್ತು. ಕಳೆದ ಮೂರು ವರ್ಷಗಳಿಂದ ಪ್ರವಾಸಿಗರು ಈ ಹುಲಿಯನ್ನು ಕಣ್ತುಂಬಿಕೊಂಡಿದ್ದರು. ಇನ್ಮುಂದೆ ಶೌರ್ಯ ನೆನಪು ಮಾತ್ರ.

”ಕಳೆದ ವರ್ಷವೂ ಇದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಶೌರ್ಯ ಬಳಲುತ್ತಿದ್ದ. ಆಗ ಚಿಕಿತ್ಸೆ ನೀಡಿದಾಗ ಗುಣಮುಖವಾಗಿದ್ದ. ಆದರೆ, ಈಗ ಮತ್ತೆ ಸಮಸ್ಯೆ ಕಾಣಿಸಿಕೊಂಡಿತ್ತು. 21 ದಿನ ನಿರಂತರವಾಗಿ ಮೃಗಾಲಯದ ತಜ್ಞ ವೈದ್ಯರು ಚಿಕಿತ್ಸೆ ನೀಡಿದರೂ, ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ಮಾಹಿತಿ ನೀಡಿದ್ದಾರೆ.