ಉ.ಕ ಸುದ್ದಿಜಾಲ ಖಾನಾಪೂರ : 

ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿ ದೇಶದ ವಿವಿಧ ಅಭಯಾರಣ್ಯಗಳಲ್ಲಿ ಹುಲಿಗಳನ್ನು ಬೇಟೆಯಾಡಿ, ಅದರ‌ ದೇಹದ ಭಾಗಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರುತ್ತಿದ್ದ ಆರೋಪಿಯನ್ನು ಖಾನಾಪುರ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ.

ಮಧ್ಯಪ್ರದೇಶದ ದಾಮೋ‌ ಜಿಲ್ಲೆಯ ಚಿಕಾ ಅಲಿಯಾಸ್ ಕೃಷ್ಣ ಪಟ್ಟೆ ಪವಾ‌ರ್ ಬಂಧಿತ ಆರೋ‍ಪಿ. ಶ್ರೀಗಂಧದ ಮರಗಳ ತುಂಡುಗಳನ್ನು ಕದ್ದ ಆರೋಪದ ಮೇಲೆ ಶುಕ್ರವಾರ ಬಂಧಿಸಿ, ವಿಚಾರಣೆ ನಡೆಸಿದಾಗ ಆತ ಅಂತರರಾಜ್ಯ ಹುಲಿ ಬೇಟೆಗಾರ ಎಂಬುದು ಗೊತ್ತಾಗಿದೆ’ ಎಂದು ವಲಯ ಅರಣ್ಯ ಅಧಿಕಾರಿ ನಾಗರಾಜ ಬಾಳೆಹೊಸೂರ ತಿಳಿಸಿದ್ದಾರೆ.

ಆರೋಪಿ ಪತ್ತೆ ಆಗಿದ್ದೇಗೆ :

ಜುಲೈನಲ್ಲಿ ತಾಲ್ಲೂಕಿನ ಜಳಗಾ ಗ್ರಾಮದ ಬಳಿ ಶ್ರೀಗಂಧ ಮರಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಬೆಳಗಾವಿ ತಾಲ್ಲೂಕಿನ ಕಲಖಾಂಬ ಗ್ರಾಮದ ಬಳಿ ಇರುವುದು ಗೊತ್ತಾಯಿತು. ವಿಚಾರಣೆ ವೇಳೆ ಆತ ಬೇರೆ ಬೇರೆ ರಾಜ್ಯಗಳಲ್ಲಿ ಹುಲಿಗಳನ್ನು ಬೇಟೆಯಾಡಿದ ವಿಷಯ ಗೊತ್ತಾಯಿತು’ ಎಂದು ಅವರು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಮೃತಪಟ್ಟ ಹುಲಿ ಬೇಟೆಗಾರ ಸಂಸಾ‌ಚಂದ್‌ ತಂಡದ ಸದಸ್ಯರಲ್ಲಿ ಈತ ಕೂಡ ಒಬ್ಬ ಎಂಬುದು ಗೊತ್ತಾಗಿದೆ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೇಲಘಾಟ್ ಅರಣ್ಯದಲ್ಲಿ ಹುಲಿ, ಕರಡಿಗಳನ್ನು ಬೇಟೆಯಾದ ಬಗ್ಗೆ ದೂರು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಅವರಾಧ ನಿಯಂತ್ರಣ ಬ್ಯೂರೊ ಜೊತೆಗೆ ಸಂವಹನ ಸಾಧಿಸಿ, ವಿವರವಾದ ತನಿಖೆ ನಡೆಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಉಪ ಅರಣ್ಯ ಮಹಾ ನಿರೀಕ್ಷಕರಿಂದ ಸೂಚನೆ ಬಂದಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚವ್ಹಾಣ ಮಾರ್ಗದರ್ಶನ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಕಲ್ಲೋಳಿಕ‌ರ ನೇತೃತ್ವದಲ್ಲಿ, ಖಾನಾಪುರ ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿತು.