ಉ.ಕ ಸುದ್ದಿಜಾಲ ಶಿವಮೊಗ್ಗ :
ಜಗನ್ಮಾತೆ ಪದ್ಮಾವತಿ ಸನ್ನಿಧಿಗೆ ಚೆನೈ ಮೂಲದ ಕಮಲ್ ಕೊಪಡಿಯಾ ಜೈನ್ ಮತ್ತು ನಿಶಿಜೈನ್ ಕುಟುಂದವರು ಸ್ವರ್ಣ ಪಲ್ಲಕ್ಕಿಯನ್ನು ಕೊಡುಗೆಯಾಗಿ ನೀಡುವುದರೊಂದಿಗೆ ದೇವಸ್ಥಾನಕ್ಕೆ ಸಮರ್ಪಿಸಿದರು.
ಜೈನರ ದಕ್ಷಿಣ ಕಾಶಿ ಹೊಂಬುಜ ಜೈನದಿಗಂಬರ ಮಠದ ಸ್ವಸ್ತಿಶ್ರೀ ಜಗದ್ಗುರು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಮ್ಮುಖದಲ್ಲಿ ಜಗನ್ಮಾತೆ ಪದ್ಮಾವತಿ ಸನ್ನಿಧಿಗೆ ಸ್ವರ್ಣ ಪಲ್ಲಕ್ಕಿ ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಮಹಾಸ್ವಾಮಿಜಿ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿ ಕೊಡುಗೆ ನೀಡಿದ ದಂಪತಿಯವರನ್ನು ಆಶೀರ್ವದಿಸಿದರು.
ಕೊಡುಗೈದಾನಿ ತೋಪಡಿಯಾ ಜೈನ್ ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ಮಠಕ್ಕೆ ಬಂದಾಗ ಈ ಕ್ಷೇತ್ರದ ಸ್ವಾಮಿ ಪಾರ್ಶ್ವನಾಥ ಮತ್ತು ಯಕ್ಷಿ ಪದ್ಮಾವತಿ ದೇವಿಯ ಪೂಜೆ ನೆರವೇರಿಸುವ ಸಮಯದಲ್ಲಿ ಈ ಕ್ಷೇತ್ರಕ್ಕೆ ಏನಾದರೂ ದಾನ ಮಾಡಬೇಕೆಂಬ ಆಶಯ ಮನಸ್ಸಿನಲ್ಲಿ ಬಂದಿತ್ತು.
ಈ ವಿಚಾರವನ್ನು ಸ್ವಾಮೀಜಿಯವರಲ್ಲಿ ಹೇಳಿಕೊಂಡಾಗ ಸಾಂಪ್ರದಾಯಿಕ ಮಠದ ಪಲ್ಲಕ್ಕಿ ಹಳೆಯದಾಗಿದೆ. ನೀಡಬಯಸಿದ್ದಲ್ಲಿ ಹೊಸತನ್ನು ಕೊಡಬಹುದು ಎಂದು ತಿಳಿಸಿದ್ದರಿಂದ ಸ್ವರ್ಣ ಪಲ್ಲಕ್ಕಿ ಕೊಡುವ ಸಂಕಲ್ಪ ಮಾಡಿಕೊಂಡಿದ್ದೆ ಎಂದರು.