ಉ.ಕ ಸುದ್ದಿಜಾಲ ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ ಸರಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರಲ್ಲದೆ, ಸರಕಾರ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಹೇಳಿದ್ದಾರೆ.
ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಣಗಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಭಿತಾಗಿದ್ದು, ಆಡಳಿತ ಪಕ್ಷದ ಹಿರಿಯ ಶಾಸಕರೊಬ್ಬರು ತಮ್ಮ ಹಾಗೂ ಸರಕಾರದ ವೈಫಲ್ಯವನ್ನು ಬಹಿರಂಗವಾಗಿಯೇ ಒಪ್ಪಿಕೊಂಡರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಮಾದ್ಯದೊಂದಿಗೆ ಮಾತನಾಡಿದ ಅವರು, ಸರಕಾರ ಸುರಳಿತವಾಗಿ ನಡೆಯಬೇಕಾದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಟ್ಟಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ದೇಶ ಕಟ್ಟಲು ಸಾಧ್ಯ.
ಆದರೆ ಇಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ನಡುವೆ ತಾಳಮೇಳ ಇಲ್ಲದಂತಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಯಾರೊಬ್ಬರು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಬಡ ಜನತೆಗೆ ನ್ಯಾಯ ಸಿಗಲು ಸಾಧ್ಯ ಎಂದರು.
ಸರಕಾರದ ವಿರುದ್ದ ಹರಿಹಾಯುತ್ತಲೇ ಹೆಸ್ಕಾಂ ವಿರುದ್ದವೂ ಬಹಿರಂಗ ಆರೋಪಗಳ ಸುರಿಮಳೆಗೈದರು. ಗ್ರಾಮೀಣ ಪ್ರದೇಶದಲ್ಲಿ ದಿನದ ೨೪ ಗಂಟೆಗಳಲ್ಲಿ ಕೇವಲ ಮರ್ನಾಲ್ಕು ಗಂಟೆ ಮಾತ್ರ ವಿದ್ಯೂತ್ ಪೂರೈಕೆ ಮಾಡಲಾಗುತ್ತಿದೆ.
ಇಂಥ ಪರಿಸ್ಥಿತಿಯಲ್ಲಿ ಮೊದಲೇ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಸ್ಥಿತಿ ಅಯೋಮಯವಾಗಿದೆ. ಸರಕಾರ ಇತ್ತ ಗಮನ ಹರಿಸಿಲ್ಲ ಎಂದು ರಾಜು ಕಾಗೆ ದೂರಿದರು.
ಅಲ್ಲದೆ ರೈತರು ಟಿಸಿ ಅಳವಡಿಸಬೇಕಾದರೆ 5 ರಿಂದ 6 ಲಕ್ಷ ರೂ ಗಳ ವೆಚ್ಚವನ್ನು ಹೆಸ್ಕಾಂನವರು ವಿಧಿಸುತ್ತಾರೆ. ಅಷ್ಟು ಹಣ ರೈತರ ಬಳಿ ಇದ್ದಿದ್ದರೆ ಅವರೇಕೆ ಕೃಷಿ ಕಾಯಕ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಎಸ್ಟಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬಳು ಹಿಟ್ಟಿಣ ಗಿರಣಿಗಾಗಿ ವಿದ್ಯೂತ್ ಸಂಪರ್ಕ ಪಡೆದುಕೊಳ್ಳಲು ಎದುರಿಸುತ್ತಿರುವ ಸಮಸ್ಯೆಯನ್ನು ಮಾಧ್ಯಮದವರ ಎದುರುಬಿಚ್ಚಿಟ್ಟರು.ಹಿಟ್ಟಿನ ಗಿರಣಿಯ ವಿದ್ಯೂತ್ ಸಂಪರ್ಕಕ್ಕೆ ಹೆಸ್ಕಾಂನವರು 45 ಸಾವಿರೂ ಖರ್ಚು ಹೇಳುತ್ತಾರೆ.
ಆ ಬಡ ಮಹಿಳೆ ದುಡ್ಡು ಎಲ್ಲಿಂದ ತರಬೇಕು? ಈ ಬಗ್ಗೆ ಮುಖ್ಯಮಂತ್ರಿಗಳು ಏಕೆ ಗಮನ ಹರಿಸುತ್ತಿಲ್ಲ ಎಂದು ಶಾಸಕ ರಾಜು ಕಾಗೆ ಅಸಮಾದಾನ ವ್ಯಕ್ತ ಪಡಿಸಿದರು.
ಒಟ್ಟಾರೆಯಾಗಿ ಸರಕಾರದ ಮಟ್ಟದಲ್ಲಿ ಯಾವ ಕೆಲಸ ಕಾರ್ಯಗಳು ಸುರಳಿತವಾಗಿ ನಡೆದಿಲ್ಲ ಎಂಬುದು ಶಾಸಕ ರಾಜು ಕಾಗೆ ಆರೋಪದಿಂದ ಬಹಿರಂಗವಾಗಿದ್ದು, ಈ ಅಸಮಾದಾನ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲರದ್ದೂ ತಪ್ಪಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ.ನಾವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಾಮಾಜಿಕ ನ್ಯಾಯ ಕೊಡಲು ಆಗುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿದರೆ ಮಾತ್ರ ಬದಲಾವಣೆ ತರಲು ಸಾಧ್ಯ ಎನ್ನುತ್ತಾರೆ ಕಾಗವಾಡ ಶಾಸಕ ರಾಜು ಕಾಗೆ.